Tuesday, 2 June 2015

ಐದು ಕಥೆಗಳು (Small story's)





ನೋಡು ಅಲ್ಲಾಡುತ್ತಿದ್ದಾನೆ!
ನಸ್ರುದ್ದೀನ್ ತನ್ನ ಗೆಳೆಯರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ. ಅವರ ಮಾತಿನ ವಿಷಯ ಸಾವಿನ ಕಡೆಗೆ ಹೊರಳಿತು. ಅವರಲ್ಲೊಬ್ಬ, 'ನೀನು ಸತ್ತು ನಿನ್ನ ಹೆಣ ಶವದ ಪೆಟ್ಟಿಗೆಯಲ್ಲಿರುವಾಗ ನಿನ್ನನ್ನು ನೋಡುವ ಬಂಧು ಬಳಗದವರ ಬಾಯಿಂದ ಯಾವ ಮಾತನ್ನು ಕೇಳಲು ಬಯಸುತ್ತೀಯೆ?' ಎಂದ.
ಅವರಲ್ಲಿ ವೈದ್ಯನಾದವನೊಬ್ಬ, 'ಅವರು ನನ್ನನ್ನು ನೋಡುತ್ತಾ, ಆತನೊಬ್ಬ ಮಹಾನ್ ವೈದ್ಯನಾಗಿದ್ದ, ಒಳ್ಳೆಯ ವ್ಯಕ್ತಿಯಾಗಿದ್ದ' ಎನ್ನುವುದನ್ನು ಕೇಳಲು ಬಯಸುತ್ತೇನೆ ಎಂದ.
ಮತ್ತೊಬ್ಬ ಅಧ್ಯಾಪಕನಾಗಿದ್ದವನು, 'ಆತನೊಬ್ಬ ಒಳ್ಳೆಯ ಅಧ್ಯಾಪಕ, ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಿದಾತ, ಆತ ತನ್ನ ಹೆಂಡತಿಗೆ ಅದ್ಭುತ ಗಂಡನೂ ಆಗಿದ್ದ ಎಂದು ಕೇಳಲು ಬಯಸುತ್ತೇನೆ' ಎಂದ.
ನಸ್ರುದ್ದೀನ್‌ನ ಸರದಿ ಬಂದಾಗ ಆತ, 'ನನ್ನ ಬಂಧು ಬಳಗದವರು ನನ್ನ ಹೆಣವನ್ನು ನೋಡುತ್ತಾ ಆತ ಪುನಃ ಬದುಕಿದ್ದಾನೆ, ನೋಡು ಅಲ್ಲಾಡುತ್ತಿದ್ದಾನೆ ಎನ್ನುವುದನ್ನು ಕೇಳಲು ಬಯಸುತ್ತೇನೆ' ಎಂದ.
ಸತ್ತವನು ಯಾರು?
ಒಬ್ಬ ಸತ್ತ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕೆಂದು ಹೊತ್ತೊಯ್ಯುತ್ತಿದ್ದರು. ಆತನ ಬಂಧುಬಳಗದ ದೊಡ್ಡ ಹಿಂಡೇ ಅದನ್ನು ಹಿಂಬಾಲಿಸುತ್ತಿತ್ತು. ಊರಿಗೆ ಹೊಸದಾಗಿ ಬಂದಿದ್ದ ವ್ಯಕ್ತಿಯೊಬ್ಬ ಅಲ್ಲೇ ಪಕ್ಕದಲ್ಲಿ ನಿಂತು ನೋಡುತ್ತಿದ್ದ ನಸ್ರುದ್ದೀನ್‌ನನ್ನು 'ಸತ್ತಿರುವ ವ್ಯಕ್ತಿ ಯಾರು?' ಎಂದು ಕೇಳಿದ. ಯಾವುದೋ ಆಲೋಚನೆಯಲ್ಲಿದ್ದ ನಸ್ರುದ್ದೀನ್, 'ಯಾರೋಪ್ಪ, ನನಗೂ ಗೊತ್ತಿಲ್ಲ. ಬಹುಶಃ ಶವಪೆಟ್ಟಿಗೆಯಲ್ಲಿರುವ ವ್ಯಕ್ತಿಯೇ ಇರಬೇಕು' ಎಂದ.
ನಂಬಿಕೆ
ಒಂದು ದಿನ ನಸ್ರುದ್ದೀನ್ ಮತ್ತು ಆತನ ಗೆಳೆಯರು ಊರಿನ ಜನಗಳಿಗೆ ಒಂದು ಸುಳ್ಳು ಹೇಳಿ ತಮಾಷೆ ಮಾಡೋಣವೆಂದು ನಿರ್ಧರಿಸಿದರು. ನಸ್ರುದ್ದೀನ್ ಊರಿನ ಜನರನ್ನೆಲ್ಲಾ ಸೇರಿಸಿ ಊರಿನ ಪಕ್ಕದಲ್ಲಿರುವ ಬೆಟ್ಟದ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಧಿಯಿದೆ ಎಂದು ಹೇಳಿದ. ಆತನ ಮಾತನ್ನು ನಂಬಿದ ಜನರೆಲ್ಲಾ ನಿಧಿಯನ್ನು ಪಡೆಯಲು ಬೆಟ್ಟದೆಡೆಗೆ ಓಡತೊಡಗಿದರು. ನಸ್ರುದ್ದೀನ್ ಸಹ ಅವರ ಜೊತೆ ಓಡತೊಡಗಿದ. ಅದನ್ನು ನೋಡಿದ ಆತನ ಗೆಳೆಯ 'ನೀನ್ಯಾಕೆ ಅವರ ಜೊತೆ ಓಡುತ್ತಿದ್ದೀಯೆ?' ಎಂದು ಕೇಳಿದ್ದಕ್ಕೆ, 'ಅಷ್ಟೊಂದು ಜನ ನನ್ನ ಮಾತನ್ನು ನಂಬಿದರಲ್ಲಾ! ಅಲ್ಲಿ ನಿಧಿ ಇರುವುದು ನಿಜವೇ ಇದ್ದರೂ ಇರಬಹುದೇನೋ!' ಎಂದು ಹೇಳಿ ಓಡುವುದನ್ನು ಮುಂದುವರಿಸಿದ.

ಅದೃಷ್ಟವಂತ
ನಸ್ರುದ್ದೀನ್ ಮತ್ತು ಆತನ ಪತ್ನಿ ಮನೆಯಲ್ಲಿ ಕೂತು ಊಟ ಮಾಡುತ್ತಿದ್ದರು. ಹಿತ್ತಲಲ್ಲಿ ಏನೋ ಸರಸರ ಸದ್ದಾಯಿತು. ಯಾರೋ ಕಳ್ಳ ಬಂದಿರಬಹುದೆಂದು ನಸ್ರುದ್ದೀನ್ ತನ್ನ ಬಂದೂಕು ತೆಗೆದುಕೊಂಡು ಕಿಟಕಿಯಿಂದ ನೋಡಿದ. ಹಿತ್ತಲ ತೋಟದಲ್ಲಿ ಬಿಳಿಯದೊಂದು ವಸ್ತು ಚಲಿಸಿದಂತಾಯಿತು. ತಕ್ಷಣ ತನ್ನ ಬಂದೂಕು ಗುರಿಯಿಟ್ಟು ಗುಂಡು ಹಾರಿಸಿದ. ನಂತರ ಅದೇನದು ನೋಡೋಣವೆಂದು ಹತ್ತಿರ ಹೋಗಿ ನೋಡಿದರೆ ಅದು ದಿನ ಬೆಳಿಗ್ಗೆ ಆತನ ಪತ್ನಿ ಒಗೆದು ಹಾಕಿದ್ದ ಆತನದೇ ಹಾಗೂ ಆತನಿಗೆ ಅತ್ಯಂತು ಪ್ರಿಯವಾಗಿದ್ದ ಬಿಳಿಯ ಅಂಗಿಯಾಗಿತ್ತು. ಅದು ಗಾಳಿಗೆ ಅಲುಗಾಡುತ್ತಿತ್ತು
ಹಾಗೂ ಬಂದೂಕಿನ ಗುಂಡೇಟಿನಿಂದ ಛಿದ್ರವಾಗಿತ್ತು. ಆತನ ಹಿಂದೆಯೇ ಓಡಿಬಂದ ಆತನ ಪತ್ನಿ ಬಂದೂಕಿನ ಗುಂಡೇಟಿನಿಂದ ಆತನ ಅಂಗಿಗಾಗಿದ್ದ ಗತಿ ನೋಡಿ, 'ಅಯ್ಯೋ ದುರಾದೃಷ್ಟವಂತನೇ! ನಿನ್ನ ಪ್ರಿಯವಾದ ಅಂಗಿಯನ್ನು ನೀನೇ ಹಾಳುಮಾಡಿಕೊಂಡೆಯಾ!' ಎಂದಳು. 'ಇಲ್ಲ, ನಾನು ದುರಾದೃಷ್ಟವಂತನಲ್ಲ. ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟವಂತನೆಂದೇ ಹೇಳಬೇಕು. ದಿನ ಬೆಳಿಗ್ಗೆ ನಾನು ಬಿಳಿಯ ಅಂಗಿಯನ್ನೇ ಹಾಕಿಕೊಳ್ಳೋಣವೆಂದುಕೊಂಡಿದ್ದೆ. ಅದೃಷ್ಟವಶಾತ್ ಹಾಕಿಕೊಳ್ಳಲಿಲ್ಲ. ಹಾಕಿಕೊಂಡಿದ್ದಿದ್ದರೆ ಇಷ್ಟೊತ್ತಿಗೆ ಬಂದೂಕಿನ ಗುಂಡಿಗೆ ಬಲಿಯಾಗಿ ಇಲ್ಲಿ ಸತ್ತುಬಿದ್ದಿರಬೇಕಾಗಿತ್ತು' ಎಂದ.
ಜಗತ್ತಿನ ಕೊನೆ
ಒಂದಷ್ಟು ಜನ ತತ್ವಜ್ಞಾನಿಗಳು ಹಾಗೂ ಜ್ಯೋತಿಷಿಗಳು ಜಗತ್ತು ಹೇಗೆ ಮತ್ತು ಎಂದು ಕೊನೆಗೊಳ್ಳುತ್ತದೆ ಎನ್ನುವುದರ ಬಗ್ಗೆ ಬಹಳಷ್ಟು ಚರ್ಚೆ, ವಾದ-ವಿವಾದ ನಡೆಸಿದರೂ ಯಾವುದೊಂದೂ ತೀರ್ಮಾನಕ್ಕೆ ಬರದಾದರು. ಕೊನೆಗೆ ವಿಷಯದ ಇತ್ಯರ್ಥಕ್ಕೆ ವಿದ್ವಾಂಸ ಮುಲ್ಲಾ ನಸ್ರುದ್ದಿನ್ ಬಳಿಗೆ ಹೋಗೋಣವೆಂದು ಅವರಲ್ಲೊಬ್ಬರು ಸೂಚಿಸಿದರು. ಎಲ್ಲರೂ ಸಮ್ಮತಿಸಿ ನಸ್ರುದ್ದಿನ್ ಬಳಿಗೆ ಹೋಗಿ, 'ಜಗತ್ತು ಯಾವಾಗ ಕೊನೆಗೊಳ್ಳುತ್ತದೆ? ಅದರ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೆ?' ಎಂದು ಕೇಳಿದರು.
'ಹೋ ಹೌದು. ನನಗೆ ತಿಳಿದಿದೆ' ಎಂದು ಹೇಳಿ ತನ್ನ ಗಡ್ಡ ನೀವಿಕೊಂಡ. ಎಲ್ಲರೂ ಕುತೂಹಲದಿಂದ ಆತನ ಸುತ್ತ ನಿಂತು, 'ಹೇಳಿ, ಯಾವಾಗ ಕೊನೆಗೊಳ್ಳುತ್ತದೆ. ಅದನ್ನು ತಿಳಿಯಲು ನಾವೆಲ್ಲಾ, ಕಾತುರದಿಂದ ಕಾಯುತ್ತಿದ್ದೇವೆ' ಎಂದರು.
ನಸ್ರುದ್ದಿನ್ ಅವರೆಡೆಗೆ ನೋಡುತ್ತಾ, 'ಜಗತ್ತು ಕೊನೆಗೊಳ್ಳುವುದು ನಾನು ಸತ್ತಾಗ' ಎಂದ.
'ನೀವು ಸತ್ತಾಗ? ಅದ್ಹೇಗೆ ಸಾಧ್ಯ? ನಿಮ್ಮ ಸಾವಿಗೂ ಜಗತ್ತು ಕೊನೆಗೊಳ್ಳುವುದಕ್ಕೂ ಏನು ಸಂಬಂಧ?' ಎಂದು ಕೇಳಿದರು ಆತನ ಮಾತಿನ ಅರ್ಥ ತಿಳಿಯಲಾಗದೆ.
ಅದಕ್ಕೆ ಮುಲ್ಲಾ, 'ನಾನು ಸತ್ತಾಗ ಜಗತ್ತು ನನ್ನ ಪಾಲಿಗಂತೂ ಕೊನೆಗೊಳ್ಳುತ್ತದೆ. ನಿಮ್ಮ ಬಗೆಗೆ ನನಗೆ ಗೊತ್ತಿಲ್ಲ' ಎಂದ.