Saturday, 4 January 2014

ಕನ್ನಡ ಚಲನಚಿತ್ರಗಳು

ಕನ್ನಡ ಚಲನಚಿತ್ರಗಳು ಕರ್ನಾಟಕದಲ್ಲಿ ಆಂಗ್ಲಭಾಷೆಯ ಶೀರ್ಷಿಕೆಯಡಿ ಕನ್ನಡ ಚಲನಚಿತ್ರಗಳು ನಿರ್ಮಾಣವಾಗುತ್ತಿರುವುದು ಕನ್ನಡ ಭಾಷಾ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಉದ್ದೇಶದಿಂದ ಇಂಥಹ ಚಲನಚಿತ್ರಗಳಿಗೆ ಸರ್ಕಾರ ಯಾವುದೇ ರೀತಿಯ ಸೌಲಭ್ಯ, ಸಹಕಾರ, ಆಕ ನೆರವು ಹಾಗೂ ಪ್ರೋತ್ಸಾಹ ನೀಡಬಾರದು. ಸರ್ಕಾರ ಈ ಸೌಲಭ್ಯಗಳನ್ನು ನೀಡುವುದರಿಂದ ಕೀಳು ಅಭಿರುಚಿಯುಳ್ಳ ಹಾಗೂ ಈ ನೆಲದ ಭಾಷೆಯ ತದ್ವಿರುದ್ದ ಶೀರ್ಷಿಕೆಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇದರಿಂದ ಯುವ ಜನಾಂಗ ಮತ್ತು ಮಹಿಳಾ ಪ್ರೇಕ್ಷಕರ ಮನಸ್ಸಿನ ಮೇಲೆ ಕೆಟ್ಟಪರಿಣಾಮ ಬೀರುವ ಸಾದ್ಯತೆಯನ್ನು ಮಣಗಾಣಬಹುದಾಗಿದೆ. ಆಂಗ್ಲಭಾಷೆಯ ಶೀರ್ಷಿಕೆಯಡಿ ನಿರ್ಮಾಣವಾಗುವ ಚಿತ್ರಗಳು ಆಂಗ್ಲಭಾಷೆಯದ್ದೇಯಾದರೆ ಮನಸ್ಸಿಗೆ ನೋವಾಗುವುದಿಲ್ಲ. ಆದರೆ ನಿರಂತರವಾಗಿ ಕನ್ನಡ ಚಲನಚಿತ್ರಗಳು ಆಂಗ್ಲಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವುದು ಕನ್ನಡಭಾಷೆಯಲ್ಲಿ ಶೀರ್ಷಿಕೆಗಳನ್ನು ಹೆಸರಿಸಲು ಸಾಧ್ಯವಿಲ್ಲವೇ ಎನ್ನುವ ಆತಂಕ, ಕಳವಳ ಕನ್ನಡಿಗರ ಮನಸ್ಸಿನಲ್ಲಿ ಉಂಟಾಗುವುದು ಸಹಜ. ಇಂತಹ ಶೀರ್ಷಿಕೆಗಳನ್ನು ನಿಯಂತ್ರಿಸುವ ಮೂಲಕ ಕನ್ನಡಿಗರ ಭಾವನೆಗಳನ್ನು ಅರ್ಥಮಾಡಿಕೊಂಡು ಕನ್ನಡಭಾಷಾ ಬೆಳವಣಿಗೆಗೆ ಉತ್ತೇಜನ ನೀಡಬೇಕಾಗಿದೆ. ಕರ್ನಾಟಕದಲ್ಲಿ ಆಂಗ್ಲಶೀರ್ಷಿಕೆಯಡಿ ಕನ್ನಡ ಚಲನಚಿತ್ರಗಳು ನಿರ್ಮಾಣವಾಗುತ್ತಿರುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಕನ್ನಡ ಸಾಹಿತಿಗಳು, ಚಿಂತಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಆಮಂತ್ರಿಸಿ, ಅವರೊಡನೆ ಸಮಗ್ರವಾಗಿ ಸಂವಹನ ನಡೆಸಿ, ನಿರ್ಣಯಕೈಗೊಳ್ಳಬಹುದಾಗಿತ್ತಾದರೂ ವಾರ್ತಾ ಇಲಾಖೆಯ ನಿರ್ದೇಶಕರು ದಿನಾಂಕ:19-08-2013ರಂದು ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದವರು ಹಾಗೂ ಇಂಥಹ ಚಿತ್ರಗಳನ್ನು ಪ್ರೋತ್ಸಾಹಿಸುವ ಕೆಲವೇ ವ್ಯಕ್ತಿಗಳನ್ನು ಆಮಂತ್ರಿಸಿ, ಚರ್ಚೆನಡೆಸಿ ಕನ್ನಡ ಭಾಷಾ ನೀತಿಯ ವಿರುದ್ಧ ನಿರ್ಣಯ ಕೈಗೊಂಡಿರುವುದು ದುರದೃಷ್ಟಕರ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು, ಕನ್ನಡ ಭಾಷಾ ಶ್ರೀಮಂತಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾದ ಇಂದಿನ ದಿನದಲ್ಲಿ ಆಂಗ್ಲ ಭಾಷಾ ಶೀರ್ಷಿಕೆಯ ಚಲನಚಿತ್ರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯಾಗಿದೆ. ಕರ್ನಾಟಕದಲ್ಲಿ ಆಂಗ್ಲಶೀರ್ಷಿಕೆಯಡಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುವವರನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಅಲ್ಲದೆ ಇಂತಹ ಚಲನಚಿತ್ರಗಳಿಗೆ ಸರ್ಕಾರದ ಯಾವುದೇ ರೀತಿಯ ಸೌಲಭ್ಯ, ಸಹಕಾರ, ಆಕ ನೆರವು, ಪ್ರೋತ್ಸಾಹ ನೀಡಬಾರದು, ಎನ್ನುವ ಕನ್ನಡ ಅಭಿಮಾನಿಗಳ ನಿಲುವಿನ ವಿರುದ್ಧ ಆಂಗ್ಲ ಶೀರ್ಷಿಕೆ ಚಲನಚಿತ್ರಗಳಿಗೂ ನೆರವು ನೀಡುವಂತೆ ನಿರ್ಣಯ ಕೈಗೊಂಡಿರುವುದು ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಮಾರಕವಾಗಬಹುದೆನ್ನುವುದು ಎನ್ನಅಭಿಮತ. --ಕೆ.ಟಿ.ಆರ್.

No comments:

Post a Comment