ಕನ್ನಡ
ಒಂದು– ಚಿಂತನೆ
ಕನ್ನಡ
ಭಾಷೆಯ ಸ್ಥಿತಿಗತಿಗಳ ಬಗ್ಗೆ ಆತಂಕದ ದನಿಗಳ
ಎಲ್ಲ ಕಡೆಗಳಲ್ಲೂ ಕೇಳಿಬರುತ್ತಿವೆ. ನಮ್ಮ ಸಾಮಾಜಿಕ ವ್ಯವಹಾರಗಳಲ್ಲಿ
ಕನ್ನಡಕ್ಕೆ ದೊರಕಬೇಕಾದ ಸ್ಥಾನಮಾನಗಳು ಲಭಿಸಿಲ್ಲದಿರುವುದೇ ಈ ಆತಂಕಕ್ಕೆ ಮುಖ್ಯ
ಕಾರಣವಾಗಿದೆ. ಈ ಪರಿಸ್ಥಿತಿಗೆ ಕನ್ನಡಿಗರ
ಅಭಿಮಾನ ಶೂನ್ಯತೆ, ಆಡಳಿತ ಸೂತ್ರ ಹಿಡಿದ
ಪಕ್ಷಗಳ ಅನಿಶ್ಚಿತ ಧೋರಣೆ, ನೌಕರಶಾಹಿಯ ವಿರೋಧಿನಿಲುವು
ಕೇಂದ್ರ ಸರಕಾರದ ದ್ವಿಮುಖ ಭಾಷಾನೀತಿ
ಇವೆಲ್ಲವೂ ಒಂದಿಲ್ಲೊಂದು ಬಗೆಯಲ್ಲಿ ಪ್ರೇರಕಗಳಾಗಿವೆಯೆಂದು ಹಲವರ ನಿಲುವು ಮತ್ತೆ
ಕೆಲವರು ಕನ್ನಡ ಭಾಷೆಗೆ ಆಧುನಿಕ
ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವ ಸಾಮಾರ್ಥ್ಯಗಳಿಲ್ಲವೆಂದು ತಿಳಿಯುತ್ತಾರೆ. ಹೀಗಾಗಿ
ಈಗ ಇಡೀ ಇನ್ನಿವೇಶವನ್ನು ನಾವು
ಮರುಚಿಂತನೆಗೆ ಗುರಿಪಡಿಸುವ ಅವಶ್ಯಕತೆ ಇದೆ.
ಸಾವಿರಾರು
ವರ್ಷಗಳ ಐತಿಹಾಸಿಕ ಬೆಳವಣಿಗೆಗೆ ಇರುವ ಭಾಷೆ ಕನ್ನಡ.
ಈ ಭಾಷೆಗೆ ಲಭ್ಯವಿರುವ
ಪ್ರಾಚೀನ ಲಿಖಿತ ದಾಖಲೆಯನ್ನು ಗಮನಿಸಿ
ಹೇಳುವುದಾದರೆ ಅಷ್ಟು ಹಿಂದಿನಿಂದಲೂ ಲಿಖಿತರೂಪ
ಪಡೆದಿದ್ದು, ಈಗಲೂ ಜನಬಳಕೆಯ ಭಾಷೆಯಾಗಿ
ಉಳಿದಿರುವ ಭಾಷೆಗಳು ಜಗತ್ತಿನಲ್ಲಿ ಅತಿ
ಹೆಚ್ಚು ಸಂಖ್ಯೆಯಲ್ಲಿಲ್ಲ. ಕನ್ನಡ ಅಂಥ ಭಾಷೆಗಳಲ್ಲಿ
ಒಂದು. ಸಮೃದ್ಧ ಸಾಹಿತ್ಯ ಪರಂಪರೆ
ಇದೆ. ಜಗತ್ತಿನ ಯಾವುದೇ ಸಾಹಿತ್ಯ
ಪರಂಪರೆಗೂ ಹೆಮ್ಮೆ ತರಬಲ್ಲ ಕೃತಿಕಾರರು
ಆಗಿ ಹೋಗಿದ್ದಾರೆ. ನಮ್ಮ ಸಂಸ್ಕೃತಿಯ ಲಕ್ಷಣಗಳ್ನು
ಅರಿಯಲು ಮುಖ್ಯ ಆಕರಗಳನ್ನು ಒದಗಿಸಿದ್ದಾರೆ.
ಇವೆಲ್ಲವೂ ನಿಜ. ಆದರೆ ಇದಿಷ್ಟೇ
ವಿವರಗಳಿಂದ ಕನ್ನಡ ಹೊಸ ಜಗತ್ತಿನ
ಸವಾಲುಗಳಿಗೆ ಸನ್ನದ್ಧವಾಗಿದೆ ಎಂದು ತಿಳಿಯಬಹುದೇನು?
ಕನ್ನಡದ
ಸಮಸ್ಯೆ ಎಂದಾಗ ಭಾಷೆ. ಭಾಷಿಕರು
ಹಾಗೂ ಭಾಷಿಕರು ವಾಸಿಸುತ್ತಿರುವ ಭೂಪ್ರದೇಶ
ಇವೆಲ್ಲವೂ ಬೇರ್ಪಡಿಸಲಾಗದಂತೆ ಹೆಣೆದುಕೊಳ್ಳುತ್ತವೆ. ಈ ಮೂರೂ ಸಂಗತಿಗಳು
ನಿರ್ದಿಷ್ಟ ಚಾರಿತ್ರಿಕ ಸನ್ನಿವೇಶದಲ್ಲಿ ಬೇರೆ ರೀತಿಯ ಸಂಬಂಧಗಳನ್ನು
ಹೊಂದಿರುತ್ತವೆ ಎಂಬುದನ್ನು ಮರೆಯಬಾರದು. ಉದಾಹರಣೆಗೆ ೧೯೫೬ಕ್ಕೆ ಮೊದಲು ಕನ್ನಡ ಭಾಷಿಕರು
ಹಲವು ಆಡಳಿತ ಪ್ರದೇಶಗಳಲ್ಲಿ ಹಂಚಿ
ಹೋಗಿದ್ದರು. ಈಗ ನಾವು ಕರ್ನಾಟಕವೆಂದು
ಕರೆಯುವ ಭೂಪ್ರದೇಶದಲ್ಲಿ ಕನ್ನಡ ಭಾಷಿಕರು ಕೆಲವು
ಇನ್ನಿತರ ಭಾಷಿಕರ ಸಮುದಾಯಗಳೊಡನೆ ವಾಸಿಸುತ್ತಿದ್ದಾರೆ.
ತುಳು, ಕೊಡಗು, ಕೊಂಕಣಿ, ಉರ್ದು,
ತೆಲುಗು, ತಮಿಳು, ಮಲೆಯಾಳಂ ಹಾಗೂ
ಹಿಂದಿಯನ್ನು ಮಾತನಾಡುವ ಇಂಥ ಸಮುದಾಯಗಳು ಕರ್ನಾಟಕದಾದ್ಯಂತ
ಹರಡಿವೆ. ಕನ್ನಡ ಭಾಷಿಕ ಸಮುದಾಯವಿಡೀ ನಿರಂತರ ಭೂವ್ಯಾಪ್ತಿಯಲ್ಲಿ ವಾಸಿಸುತ್ತಿಲ್ಲ. ಮುಂಬಯಿಯಂಥ ನಗರದಲ್ಲಿ, ಕರ್ನಾಟಕದ ಒಂದೆರಡು ನಗರಗಳನ್ನು ಹೊರತುಪಡಿಸಿದರೆ ಉಳಿದ ಯಾವ ನಗರದಲ್ಲೂ ಇರದಷ್ಟು ಕನ್ನಡ ಭಾಷಿಕರಿದ್ದಾರೆ.
ಭಾರತ ತನ್ನದೇ ಸಂವಿಧಾನವನ್ನು ರಚಿಸಿಕೊಂಡ ಮೇಲೆ ಕನ್ನಡ ಭಾಷೆಯು ಎದುರಿಸಿದ ಸಮಸ್ಯೆಯನ್ನು ಮೊದಲು ವಿವರವಾಗಿ ಗಮನಿಸುವುದು ಅವಶ್ಯ. ಸ್ವಯಮಾಧಿಕಾರವುಳ್ಳ ಆಡಳಿತ ವ್ಯವಸ್ಥೆಯ ಆಯ್ಕೆ ಹುಟ್ಟು ಹಾಕಿದ ಹಲವು ಕನಸುಗಳಲ್ಲಿ ದೇಶ ಭಾಷೆಗಳ ಬೆಳವಣಿಗೆಯೂ ಒಂದು. ದೇಶ ಭಾಷೆಗಳು ಹಾಗೂ ಅವುಗಳನ್ನು ಆಡುವ ಭಾಷಿಕರು ಹರಡಿಕೊಂಡಿರುವ ಭೂಪ್ರದೇಶಗಳು ಇವೆರಡರ ನಡುವೆ ಸಂಪರ್ಕ ಕಲ್ಪಿಸಿ ಭಾಷಾವಾರು ರಾಜ್ಯ ವಿಂಗಡನೆಯಾಯಿತಷ್ಟೆ. ಈ ಮರು ಹೊಂದಾಣಿಕೆಯ ಹಿಂದೆಯೂ ಭಾಷೆ ಮತ್ತು ಭಾಷಿಕರನ್ನು ಭಾಷಾ ಪ್ರದೇಶದೊಡನೆ ಗುರುತಿಸುವ ಉದ್ದೇಶವಿದೆ; ಯಾವುದೇ ಭಾಷೆ
ಆಧುನಿಕ ಜಗತ್ತಿನ ಸವಾಲುಗಳಿಗೆ ಪ್ರತಿಸ್ಪಂದಿಸಲು
ಮುಖ್ಯವಾಗಿ ಆಡಳಿತ. ಶಿಕ್ಷಣ ಹಾಗೂ
ಸಮೂಹ ಮಾಧ್ಯಮಗಳ ವಲಯಗಳಲ್ಲಿ ಬಳಕೆಯಾಗಿ ತೊಡಗಬೇಕು. ಈ ಮೂರೂ ವಲಯಗಳಲ್ಲಿ
ಹಲವು ಉಪವಲಯಗಳಿದ್ದು ಅವೆಲ್ಲದರಲ್ಲೂ ಆ ಭಾಷೆ ಬಳಕೆಯಾಗುವುದು
ಅತ್ಯವಶ್ಯ. ಆಡಳಿತವೆಂದಾಗ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳೆಲ್ಲವೂ ಸೇರಿರುತ್ತವೆ. ಹಾಗೂ ಎಲ್ಲ ಹಂತಗಳೂ
ಸೇರುತ್ತವೆ. ಇವಲ್ಲದೆ ಭಾಷೆಯ ಬಳಕೆಗೆ
ಇನ್ನೂ ಹತ್ತಾರು ವಲಯಗಳು ಲಭ್ಯವಿವೆ,
ಉದಾಹರಣೆಗೆ ಕೌಟುಂಬಿಕ ಬಳಕೆ, ಖಾಸಗಿ ಪತ್ರವ್ಯವಹಾರ,
ಸೃಜನಶೀಲ ಸಾಹಿತ್ಯ ಇತ್ಯಾದಿ, ಉಳಿದೆಲ್ಲ
ದೇಶಭಾಷೆಗಳ ಪರಿಸ್ಥಿತಿಯನ್ನು ಗಮನಿಸುವ ಮೊದಲು ಕನ್ನಡದ
ಸ್ಥಿತಿಗತಿಗಳನ್ನು ಗಮನಿಸೋಣ.
ಆಡಳಿತದಲ್ಲಿ
ಕನ್ನಡ ಬಳಕೆಯಾಗುತ್ತಿಲ್ಲ ಎಂಬುದನ್ನು ಎಲ್ಲರೂ ಒಪ್ಪಿದರೂ ಅದಕ್ಕೆ
ಕಾರಣಗಳನ್ನು ಮಾತ್ರ ಬೇರೆ ಬೇರೆ
ಗುರ್ತಿಸುತ್ತಾರೆ. ಸರಕಾರಗಳು ಮೇಲಿಂದ ಮೇಲೆ ಕನ್ನಡವೇ
ಆಡಳಿತ ಭಾಷೆಯೆಂದು ಘೋಷಿಸಿದರೂ ತಾಲ್ಲೂಕು ಮಟ್ಟದಿಂದ ಮೇಲಕ್ಕೆ ಕನ್ನಡದ ಬಳಕೆ
ವ್ಯಾಪಕವಾಗಿ ಆಗುತ್ತಿಲ್ಲವೇಕೆ? ಸಂವಿಧಾನ ಇಂಗ್ಲಿಷ್ಗೆ
ಒದಗಿಸಿರುವ ಅಧಿಕೃತತೆಯಿಂದಾಗಿ ಕನ್ನಡದ ಬಳಕೆ ಹೆಚ್ಚುವರಿ
ಕೆಲಸವಾಗಿ ಹಲವರಿಗೆ ತೊರತೊಡಗಿದೆ. ಕನ್ನಡದಲ್ಲಿ
ಆಡಳಿತ ಸಂಬಂಧೀ ಬರವಣಿಗೆಯ ಕೊರತೆಯೆಂದು
ಅಂಥ ಬರವಣಿಗೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಈ ಬರವಣಿಗೆಗೆ ಇನ್ನೂ
ಅಧಿಕೃತತೆ ಒದಗಿಲ್ಲ. ಈ ಅನುವಾದಗಳ ಬಳಕೆಗೆ
ಪ್ರಮಾಣೀಕರಣದ ಸಮಸ್ಯೆಯನ್ನು ಅಥವಾ ಅದರ ಕೊರತೆಯನ್ನು
ಮುಂದೊಡ್ಡಲಾಗಿದೆ. ಆಡಳಿತಗಾರರಲ್ಲಿ ಕನ್ನಡ ಬಲ್ಲವರ ಸಂಖ್ಯೆ
ಹೆಚ್ಚಿರಬಹುದಾದರೂ ಕೇಂದ್ರದ ನೀತಿಯಿಂದಾಗಿ ಅಧಿಕಾರಿ
ಸ್ತರದಲ್ಲಿ ಕನ್ನಡ ಬಾರದವರು ಹೆಚ್ಚು
ಜನರಿರುವುದು ಸಾಧ್ಯವಾಗಿದೆ. ಭಾರತ ಆಡಳಿತ ಸೇವೆಗೆ
ಸೇರಿದ ಕನ್ನಡೇತರ ಅಧಿಕಾರಗಳು ತಮ್ಮ ತರಭೇತಿಯಲ್ಲಿ ಕನ್ನಡ
ಮಾತನಾಡಲು ಕಲಿಯುತ್ತರಾದರೂ ಅವರಿಗೆ ಕನ್ನಡವನ್ನು ಆಡಳಿತದಲ್ಲಿ
ಬಳಸುವ ಸಿದ್ಧತೆ ಹಾಗೂ ಅವಕಾಶಗಳು
ಕಡಿಮೆ. ಹಾಗೆಯೇ ಆಡಳಿತದಲ್ಲಿ ಕನ್ನಡ
ಬಳಕೆಯಾಗಲು ಪೂರಕ ತಂತ್ರಜ್ಞಾನದ ಕೊರತೆಯನ್ನು
ಮುಂದೊಡ್ಡಲಾಗುತ್ತಿದೆ. ಮೊದಲ ಒಂದೆರಡು ದಶಕಗಳ
ಕಾಲ ಬೆರಳಚ್ಚು ಯಂತ್ರಗಳ ಕೊರತೆಯನ್ನು ಎತ್ತಿ
ಹೇಳಲಾಗುತ್ತಿತ್ತು. ಈಗ ಬೆರಳಚ್ಚು ಯಂತ್ರಗಳು
ಮೂಲೆ ಸೇರುವ ಹೊತ್ತು ಬಂದಾಗ
ಕಂಪ್ಯೂಟರ್ ಸಾಪ್ಟ್ ವೇರ್ ನ
ಕೊರತೆಯನ್ನು ತೋರಿಸಲಾಗುತ್ತಿದೆ. ಇಂಥ ಕ್ಷೇತ್ರಗಳಲ್ಲಿ ಏನೆಲ್ಲ
ಬದಲಾವಣೆಯಾದರೂ ಮತ್ತೆ ಮತ್ತೆ ಕನ್ನಡ
ಇಂಗ್ಲಿಷ್ ಅನ್ನು ಅನುಸರಿಯೇ ಹೆಜ್ಜೆ
ಇಡಬೇಕಾದ ಪರಿಸ್ಥಿತಿ ದಿನೇ ದಿನೇ ಗಾಢಗೊಳ್ಳುತ್ತಿದೆ.
ಶಿಕ್ಷಣ
ಕ್ಷೇತ್ರದಲ್ಲಿ ಈ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ನಮಗಿನ್ನೂ
ಖಚಿತವಾದ ಭಾಷಾನೀತಿಯಾಗಲೀ ಭಾಷಾಯೋಜನೆಯಾಗಲೀ ಇಲ್ಲವಾಗಿದೆ. ಸಾಮಾನ್ಯ ಶಿಕ್ಷಣದ ಯಾವ
ಹಂತದಲ್ಲಿ ಯಾವ ಭಾಷೆಯನ್ನು ಎಷ್ಟು
ಹಾಗೂ ಹೇಗೆ ಕಲಿಯಬೇಕು ಎಂಬ
ಬಗ್ಗೆ ವಾದ-ವಿವಾದಗಳು ನಡೆಯುತ್ತಲೇ ಇವೆ. ಕನ್ನಡ ಮಾತನಾಡುವ
ಮಕ್ಕಳೂ ಔಪಚಾರಿಕ ಶಿಕ್ಷಣದ ಭಾಗವಾಗಿ
ಆ ಭಾಷೆಯನ್ನು ಕಲಿಯುತ್ತಿರುವ
ಕ್ರಮದಲ್ಲಿ ಸಮರೂಪತೆ ಹಾಗೂ ನಿರ್ದಿಷ್ಟ
ಉದ್ದೇಶಗಳು ಇಲ್ಲ. ಮಾಧ್ಯಮವಾಗಿ ಭಾಷೆಯ
ಬಳಕೆಯ ಮಾತು ಬಂದರೆ ಕನ್ನಡ
ಇಂಗ್ಲಿಷ್ಗೆ ತನ್ನ ಜಾಗವನ್ನು
ತೆರುವ ಮಾಡಿಕೊಟ್ಟಿದೆ. ಶಿಕ್ಷಣದ ಉನ್ನತ ಹಂತಗಳಿಗೆ
ಸಾಗಿದಂತೆ ಮಾನವಿಕಗಳಲ್ಲಿ ಮಾತ್ರ ಕನ್ನಡ ಮಾಧ್ಯಮದ
ಬಳಕೆಯುಂಟು. ಉಳಿದ ಎಲ್ಲ ಶಾಸ್ತ್ರಗಳಲ್ಲೂ
ಇಂಗ್ಲಿಷ್ ಏಕೈಕ ಭಾಷಾ ಮಾಧ್ಯಮ.
6ನೇಯ ದಶಕದ ಅನಂತರದಲ್ಲಿ ದೇಶಭಾಷೆಗಳನ್ನು
ಉನ್ನತ ಶಿಕ್ಷಣದ ಮಾಧ್ಯಮವನ್ನಾಗಿ ಬೆಳೆಸುವ
ಯತ್ನಗಳು ನಡೆದವು. ಆ ಉದ್ದೇಶಕ್ಕಾಗಿ
ಬೃಹತ್ ಪ್ರಮಾಣದಲ್ಲಿ ಪಠ್ಯಪುಸ್ತಕ ಹಾಗೂ ಪರಾಮರ್ಶನ ಗ್ರಂಥಗಳನ್ನು
ಸಿದ್ಧ ಪಡಿಸಲಾಯಿತು. ಆ ಕಾರ್ಯಕ್ರಮ ಈಗ
ಕನ್ನಡದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ.
ಆಗ ಸಿದ್ಧಗೊಂಡ ಪುಸ್ತಕಗಳು ಈಗ ಮೂಲೆ ಸೇರಿವೆ.
ಮಾನವಿಕೆಗಳಲ್ಲಿ ಕನ್ನಡವನ್ನು ಪರೀಕ್ಷೆಯ ಭಾಷೆಯನ್ನಾಗಿ ಬಳಸುವವರ ಸಂಖ್ಯೆ ಹೆಚ್ಚುತ್ತಿದೆಯಾದರೂ
ಅವರಿಗೆ ಸಿದ್ಧ ಉತ್ತರಗಳ ಕಟ್ಟುಗಳು
ಮಾತ್ರ ಸಾಕಾಗಿವೆ. ಅಂದರೆ ಶಿಕ್ಷಣದಲ್ಲಿ ಯಾವ
ನಿಟ್ಟಿನಿಲ್ಲೂ ಕನ್ನಡ ಸಬಲವಾಗಿ ಬಳಕೆಯಾಗುತ್ತಿಲ್ಲ.
ಈ
ಸ್ಥಿತಿಗೆ ಕಾರಣ ಹುಡುಕಿದರೆ ಮತ್ತೆ
ಹಲವು ಉತ್ತರಗಳು ಸಿಗುತ್ತವೆ : ಆಧುನಿಕ ಜ್ಞಾನಕ್ಕೆ ಇಂಗ್ಲಿಷ್ನಷ್ಟು ಕನ್ನಡ ಸನ್ನದ್ಧಗೊಂಡಿಲ್ಲ:
ಕನ್ನಡ ಭಾಷೆಯನ್ನು ಮಾಧ್ಯಮವನ್ನಾಗಿ ಹೊಂದುವುದೆಂದರೆ ರಾಷ್ಟ್ರೀಯ ಚಿಹರೆಗಳನ್ನು ಕಳೆದುಕೊಂಡಂತೆ ಹೀಗೆ ಎಷ್ಟೋ ಕಾರಣಗಳನ್ನು
ಮುಂದಿಡಲಾಗುತ್ತಿದೆ. ಪತ್ರಿಕೆ, ಅಕಾಶವಾಣಿ, ದೂರದರ್ಶನಗಳಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾಗುವುದನ್ನು
ಎಲ್ಲರೂ ಗುರುತಿಸಬಹುದು,
ಆದರೆ ದಿನಪತ್ರಿಕೆಗಳು ಸುದ್ದಿಗಾಗಿ ಈಗಲೂ ಇಂಗ್ಲಿಷ್ ಪತ್ರಿಕೆಗಳು
ರೂಪಿಸುತ್ತಿವೆ. ಜಾಹೀರಾತುಗಳು ಇಂಗ್ಲಿಷ್ನಲ್ಲಿ ಸಿದ್ದಗೊಂಡು ಅನಂತರ
ಕನ್ನಡ ಅವೃತ್ತಿಗಳು ಬರುತ್ತವೆ. ರಾಜ್ಯದ ವರದಿಗಳು, ಸ್ಥಳೀಯ
ವಿದ್ಯಾಮಾನಗಳು ಕನ್ನಡದಲ್ಲಿ ಮಾತ್ರ ಪ್ರಕಟವಾಗುತ್ತಿವೆ.
ಇದನ್ನು
ಹೊರತುಪಡಿಸಿದರೆ ವಾರಪತ್ರಿಕೆಗಳ ಮಟ್ಟಿಗೆ ಕನ್ನಡ ಬಳಕೆ
ಮತ್ತೊಂದು ದಿಕ್ಕಿನಲ್ಲಿ ಸಾಗಿದೆ. ವರದಿಗಳು, ಸುದ್ದಿಗಳು
ಮುಖ್ಯವಾಗದೇ ಹೋಗುವ ಇಂಥ ಪತ್ರಿಕೆಗಳು
ಒಟ್ಟು ಓದುಗ ಸಮುದಾಯದ ಒಳವಿರೋಧಗಳಿಗೆ
ತಕ್ಕಂತೆ ಪಾತ್ರವಹಿಸುತ್ತಿವೆ. ಇಂಗ್ಲಿಷ್ ಕನ್ನಡ ದ್ವಿಭಾಷಿಕರು ಸುದ್ಧಿ
ವಿಶ್ಲೇಷಣೆಗಳಿಗೆ ಇಂಗಿಷ್
ಪತ್ರಿಕೆಗಳನ್ನೇ ಅಧಿಕೃತವೆಂದು ವ್ಯಾಪಕವಾಗಿ ತಿಳಿಯುತ್ತಾರೆ. ಈ ಅಧಿಕೃತತೆ ಓದುಗರಿಗೆ
ಮಾತ್ರ ಸೀಮಿತವಾಗದೆ ಕನ್ನಡದ ಪತ್ರಿಕೆಗಳೂ ಮೂಲ
ಆಕರವನ್ನಾಗಿ ಇಂಗ್ಲಿಷ್ ಭಾಷಿಕ ರೂಪವನ್ನು ಆಶ್ರಯಿಸಿರುತ್ತವೆ.
ಈ ಸಮೂಹ ಮಾಧ್ಯಮಗಳಲ್ಲಿ
ಪ್ರಕಟವಾಗುವ ಜಾಹೀರಾತುಗಳೂ ಕೂಡ ಮೊದಲು ಇಂಗ್ಲಿಷ್ನಲ್ಲಿ ರೂಪುಗೊಂಡು ಆನಂತರ
ಕನ್ನಡದಲ್ಲಿ ಅವತರಣಿಕೆಯನ್ನು ಪಡೆಯುತ್ತವೆ.
ಶಿಕ್ಷಣ
ಆಡಳಿತ ಹಾಗೂ ಸಮೂಹ ಮಾಧ್ಯಮಗಳ
ಕ್ಷೇತ್ರದಲ್ಲಿ ಕನ್ನಡ ಆಧುನಿಕ ಕಾಲದ
ಅವಕಾಶಗಳನ್ನು ಪಡೆಯುತ್ತಿಲ್ಲವೆಂಬುದು ಮೇಲಿನ ವಿವರಣೆಯಿಂದ ಸ್ಪಷ್ಟಗೊಂಡಿದೆ.
ಇಷ್ಟಾದರೂ ಕನ್ನಡ ಈ ಕ್ಷೇತ್ರಗಳಲ್ಲಿ
ಅದರಲ್ಲೂ ಸಮೂಹ ಮಾಧ್ಯಮಗಳಲ್ಲಿ ಮೇಲುನೋಟಕ್ಕೆ
ವಿಸ್ತೃತ ಪಾತ್ರವನ್ನು ವಹಿಸುತ್ತಿದೆಯೆಂದು ಯಾರಾದರೂ ವಾದಿಸಬಹುದು. ಕನ್ನಡದ
ಪತ್ರಿಕೆಗಳ ಸಂಖ್ಯೆ ಪ್ರಸಾರ ವೈವಿಧ್ಯಗಳನ್ನು
ಗಮನಿಸಿ ಈ ವಾದವನ್ನು ಮುಂದುವರೆಸಬಹುದು.
ಹಾಗೆಯೇ ಈ ಪತ್ರಿಕೆಗಳಲ್ಲಿ ಹತ್ತಾರು
ವಿಷಯಗಳನ್ನು ಕುರಿತು ಪ್ರಕಟವಾಗುವ ಲೇಖನಗಳನ್ನು
ತೋರಿಸಿ, ಅಲ್ಲಿ ಕನ್ನಡ ಆಧುನಿಕ
ಜ್ಞಾನದ ವಾಹಕವಾಗಿದೆಯೆಂದು ಹೇಳಲೂಬಹುದು. ಜನಪ್ರಿಯ ವಿಜ್ಞಾನ ಬರೆಹಗಳು,
ವೈದ್ಯಶಾಸ್ತ್ರದ ಲೇಖನಗಳು, ಕೃಷಿ ಸಂಬಂಧೀ ಬರೆಹಗಳು
ಇಂಥ ವಾದಕ್ಕೆ ನೆರವಾಗುವ ನಿದರ್ಶನಗಳಾಗುತ್ತವೆ.
ಕರ್ನಾಟಕದಲ್ಲಂತೂ
ಕಳೆದ ಕೆಲವು ವರ್ಷಗಳಿಂದ ಸಾಕ್ಷರತೆಯ
ಚಳುವಳಿಯ ಮಾತು ಬಲವಾಗಿದೆ. ಜಿಲ್ಲೆಗಳನ್ನು
ಘಟಕಗಳನ್ನಾಗಿ ತೆಗೆದುಕೊಂಡು ಕಾಲಬದ್ಧ ಯೋಜನೆ ರೂಪಿಸಿ
ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಸನ್ನದ್ಧರಾಗಿದ್ದೇವೆ. ಇದರಿಂದ
ಸರಕಾರದ ಸಾಮಾಜಿಕ ಜವಾಬ್ದಾರಿ ಹಾಗೂ
ಸ್ವಯಂ ಸೇವಾ ಸಂಸ್ಥೆಗಳ ಮೂಲಕ
ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ
ಶಿಕ್ಷಿತರ ಹೊಣೆಗಾರಿಕೆ ಇವೆರಡೂ ನಿರ್ವಹಿತವಾದಂತೆ ತಿಳಿಯುತ್ತೇವೆ.
ಸಾಕ್ಷರತೆಯ ಆಂದೋಲನಕ್ಕೆ ಒಳಗಾಗಿ ಅಕ್ಷರಸ್ಥರಾಗುತ್ತಿರುವವರಲ್ಲಿ ಅತ್ಯಧಿಕ ಸಂಖ್ಯೆಯವರು
‘ತಡೆದು ಅಕ್ಷರಸ್ಥ’ರಾಗುತ್ತಿರುವವರು.
ಈ
ಎಲ್ಲ ಸಂಗತಿಗಳ ಹಿನ್ನಲೆಯಲ್ಲಿ ಕನ್ನಡದ
ಬಳಕೆಯ ವಿಸ್ತಾರವನ್ನು ಒಂದು ಸಾಮಾಜಿಕ ವಿನ್ಯಾಸದ
ಅಂಗವನ್ನಾಗಿ ಗ್ರಹಿಸುವ ಅವಶ್ಯಕತೆ ಹೆಚ್ಚಾಗುತ್ತದೆ. ಭಾಷೆಯ ಬಳಕೆಯ ಹಲವು
ವಲಯ (domain)ಗಳು ಸದಾ ಸಮಾಜದಲ್ಲಿ
ಇದ್ದೇ ಇರುತ್ತದೆ. ಅವುಗಳಲ್ಲಿ ಯಾವ ಯಾವ ಭಾಷೆಗಳನ್ನು
ಹಾಗೂ ಆಯಾ ಭಾಷೆಯ ಯಾವ
ರೂಪಗಳನ್ನು ಬಳಸಬೇಕೆಂಬ ಬಗ್ಗೆ ಭಾಷಿಕರಲ್ಲಿ ಒಂದು
ಅಲಿಖಿತ ಒಪ್ಪಂದವಿರುತ್ತದೆ. ಈ ಒಪ್ಪಂದಕ್ಕೆ ಅನುಗುಣವಾಗಿ
ಆಯಾ ಬಳಕೆಗಳು ನಿಗದಿಯಾಗಿ ನಡೆಯುತ್ತಿರುತ್ತವೆ.
ಒಟ್ಟು ವಿನ್ಯಾಸದಲ್ಲಿ ಕನ್ನಡ ಭಾಷೆ ಕೆಲವು
ವಲಯಗಳಲ್ಲಿ ಬಳಕೆಯಾಗುವುದನ್ನು ಗಮನಿಸುವುದು ಒಳ್ಳೆಯದು. ಇದರಿಂದ ಕನ್ನಡ ಆಧುನಿಕ
ಜಗತ್ತಿಗೆ ಸನ್ನದ್ಧಗೊಳ್ಳುತ್ತಿದೆಯೋ ಇಲ್ಲವೋ ಎಂಬ ಬಗ್ಗೆ
ಚಿಂತಿಸಲು ಅನುಕೂಲವಾಗುತ್ತದೆ.
ಈ
ಮೊದಲೇ ತಿಳಿಸಿದ ಮೂರು ಆದ್ಯತೆಯ
ಕ್ಷೇತ್ರಗಳಾದ ಶಿಕ್ಷಣ, ಆಡಳಿತ ಹಾಗೂ
ಸಮೂಹ ಮಾಧ್ಯಮ ಕ್ಷೇತ್ರಗಳಲ್ಲಿ ಕನ್ನಡ
ಬಳಸುವ ಬಗೆಯನ್ನು ಚರ್ಚಿಸುವ ಹಲವರು, ಕನ್ನಡ ಬಹು
ಹಿಂದೆಯೇ ಈ ವಲಯಗಳಲ್ಲಿ ಬಳಕೆಯಾಗಿ
ತನ್ನ ಸಾಮರ್ಥ್ಯವನ್ನು ಸಾಧಿಸಿ ತೋರಿಸಿದೆಯೆಂದು ವಾದಿಸುತ್ತಾರೆ.
ಬ್ರಿಟಿಷ್ ಆಡಳಿತ ಸಂದರ್ಭದ ದಾಖಲೆಗಳಲ್ಲಿ
ಕನ್ನಡದ ಬಳಕೆ ನಡೆದದ್ದು; ನ್ಯಾಯಾಲಯದಲ್ಲಿ
ಕನ್ನಡದ ಬಳಕೆ ಆಗಿದ್ದು; ವಿವಿಧ
ವಿಷಯ ಪುಸ್ತಕಗಳು ಕನ್ನಡದಲ್ಲಿ ರಚನೆಯಾದದ್ದು ಮುಂತಾದ ನಿದರ್ಶನಗಳನ್ನು ನೀಡುವುದು
ಸಾಧ್ಯ. ಕನ್ನಡದ ಬಳಕೆ ವ್ಯಾಪಕವಾಗಿ
ಆಗುತ್ತಿದ್ದ ಕಾಲದ ಮುಖ್ಯ ಲಕ್ಷಣಗಳು
೧. ಕಡಿಮೆ ಸಂಖ್ಯೆಯಲ್ಲಿ
ಇಂಗ್ಲಿಷ್ ಬಲ್ಲವರು.
೨. ಒಟ್ಟು ಸಾಮಾಜಿಕ
ವ್ಯವಹಾರದ ವಲಯವೇ ತೀರ ಸಂಕೀರ್ಣವಾಗದೇ
ಇದ್ದುದು :- ಜನಜೀವನದೊಳಗೆ
ಸರಕಾರದ ಪ್ರವೇಶ ಅಧಿಕವಾಗಿ ತೊಡಗಿದ್ದು
ಬ್ರಿಟಿಷ್ ಆಡಳಿತದಲ್ಲಿ ಎಂದುಕೊಂಡರೆ ಈ ರೀತಿ ನಡೆದ
ಪ್ರವೇಶದ ಮೊದಮೊದಲ
ಹಂತದಲ್ಲಿ ಸರಕಾರಿ ವ್ಯವಹಾರ ತೀರ
ಸರಳವಾದ ನೆಲಗಟ್ಟಿನಲ್ಲೇ ಇದ್ದಿರಬೇಕಷ್ಟೇ ಇಪ್ಪತ್ತನೇ ಶತಮಾನದಲ್ಲಿ ಈ ಘಟ್ಟದಲ್ಲಿ ಆಡಳಿತ
ವ್ಯವಸ್ಥೆ ಎಷ್ಟು ಸಂಕಿರ್ಣ ಪದರುಗಳನ್ನು
ಹೊಂದಿದೆ ಎಂಬುದನ್ನು ಗುರುತಿಸಬಹುದಾಗಿದೆ. ಇಂಗ್ಲಿಷ್ ಕಳೆದ 5 ದಶಕಗಳಲ್ಲಿ
ಪಡೆದಿರುವ ಪ್ರಾಬಲ್ಯದ ಪ್ರಮಾಣವನ್ನು ಅದು ಬಳಕೆಯ ವಿವಿಧ
ವಲಯಗಳಲ್ಲಿ ಪ್ರವೇಶಿಸಿರುವುದನ್ನು ಕಂಡಾಗ ಕನ್ನಡದ ಹಿನ್ನಡೆಯ
ಸ್ವರೂಪ ತಿಳಿಯುತ್ತದೆ.
ಕನ್ನಡ
ನಾಡು - ನುಡಿ ಹಿಂದೆಂದೂ ಇಲ್ಲದಂತೆ
ವಿಭಿನ್ನ ವಿದ್ಯಮಾನಗಳನ್ನು, ಸಂಘರ್ಷಗಳನ್ನು ಇಂದು ಎದುರಿಸುತ್ತಿದೆ. ಧರ್ಮ, ಜಾತಿ ಅಥವಾ
ಕೋಮು ಸಂಬಂಧಿ ವಿವಾದಗಳು ಒಂದು
ಕಡೆ, ಭಾಷೆ, ಗಡಿ ಮತ್ತು
ನೀರಿನ ವಿಚಾರಗಳು ಇನ್ನೊಂದೆಡೆ, ಈ ರಾಜ್ಯದ ರಾಜಕೀಯ
ಮತ್ತು ಆಡಳಿತಾತ್ಮಕ ವಿಸಂಗತಿಗಳು, ಜಾಗತೀಕರಣ ಮತ್ತು ಅದು ತಂದ
ವಿಲಕ್ಷಣ ಆಧುನಿಕತೆ ಬಹಿರಂಗದಲ್ಲೂ ಅಂತರಂಗದಲ್ಲೂ ಉಂಟುಮಾಡುತ್ತಿರುವ ಬದಲಾವಣೆಗಳು, ನಕ್ಸಲ್ ಮತ್ತು ಧಾರ್ಮಿಕ/ರಾಜಕೀಯ ಭಯೋತ್ಪಾದಕ ಶಕ್ತಿಗಳು
ಹುಟ್ಟಿಸುತ್ತಿರುವ ಕೆಲವು ತಲ್ಲಣಗಳೂ ಅಲ್ಲದೆ
ಸಾಮಾನ್ಯ ಮನುಷ್ಯನೊಬ್ಬ ದಿನನಿತ್ಯದ ತನ್ನ ಬದುಕಿನಲ್ಲಿ, ಮಾರುಕಟ್ಟೆಯಲ್ಲೋ,
ಉದ್ಯೋಗ ರಂಗದಲ್ಲೋ, ತನ್ನ ಅತಿನಿಕಟ ಸಮಾಜದಲ್ಲೋ
ಎದುರಿಸುತ್ತಿರುವ, ಕ್ಷುಲ್ಲಕ - ಕ್ಷುದ್ರ ದೈನಂದಿನಗಳು ಎದುರಿಡುವ
ಸಮಸ್ಯೆಗಳು ಎಂದೆಲ್ಲ ಇವನ್ನು ಗುರುತಿಸಬಹುದು.
ಕನ್ನಡ ಭಾಷೆಯ ಬಿಕ್ಕಟ್ಟುಗಳು: ಈ ನಾಡಿನ
ಜನಭಾಷೆಗಳೊಂದಿಗೆ ಸಂಘರ್ಷ,
ಅನ್ಯ ಭಾಷೆಗಳ
ಜೊತೆಗೆ ಸಾಮರಸ್ಯ. ತಂತ್ರಜ್ಞಾನ ಬಳಕೆಗೆ ತಡೆ. ಜ್ಞಾನ ವಲಯದಲ್ಲಿ ಕನ್ನಡ ಭಾಷೆ ಬಳಕೆಗೆ
ಅವಕಾಶ ಸಿಗದಿರುವುದು ಮತ್ತು ಉದ್ಯಮಿಗಳು, ಕೋಮುವಾದ ಮತ್ತು ಪ್ರಭುತ್ವದ ನಡುವಿನ
ಅಪವಿತ್ರ ಮೈತ್ರಿ
ಇವುಗಳು ಮುಖ್ಯವಾಗಿ ಕನ್ನಡ ಭಾಷೆಗೆ ಎದುರಾಗಿರುವ ಬಹುದೊಡ್ಡ ಬಿಕ್ಕಟ್ಟುಗಳು. ಕನ್ನಡ ಭಾಷೆಯ
ಜೊತೆಗೆ ಈ ನಾಡಿನ ಅನೇಕ ಜನಭಾಷೆಗಳು, ಸಂಗಾತಿ
ಭಾಷೆಗಳೊಂದಿಗೆ ಕನ್ನಡ
ಭಾಷೆಯ ಸಂಘರ್ಷ.
ಈ ನೆಲೆದ
ಜನ ಭಾಷೆಗಳನ್ನು ಮಾತನಾಡುವವರ ಮೇಲೆ ದೌರ್ಜನ್ಯ ಎಸಗುವ ಮೂಲಕ ಹುಚ್ಚು
ಭಾಷಾಂಧತೆ ವ್ಯಕ್ತವಾಗುತ್ತಿರುವುದು. ಒಂದು ರೀತಿಯಲ್ಲಿ ಸಂಗಾತಿ
ಭಾಷೆಗಳೊಂದಿಗೆ ಸಂಘರ್ಷ,
ಕನ್ನಡ ವಿರೋಧಿ
ಸನಾತನ ಮತ್ತು
ಮಾರು ಕಟ್ಟೆಯ
ಭಾಷೆಯೊಂದಿಗೆ ಸಾಮರಸ್ಯ ಈ ಸ್ಥಿತಿ ಕನ್ನಡ
ಭಾಷೆ ಎದುರಿಸುತ್ತಿರುವ ಬಿಕ್ಕಟ್ಟು ಎಂದು ಅವರು ಹೇಳಿದರು.
ಈ ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ,
ಆಡಳಿತದ ಎಲ್ಲಾ ಹಂತದಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಸರಕಾರವು ಕ್ರಮಕೈಗೊಳ್ಳಬೇಕೆಂದು
ಎಲ್ಲರ ಅಭಿಮತ. ಆಡುಭಾಷೆಗಳು ಸಾವಿರಾರು ಇದ್ದರೂ ಹೃದಯಕ್ಕೆ ಹತ್ತಿರವಾದ ಭಾಷೆಯೆಂದರೆ ಅದು ಕನ್ನಡ. ದಿನನಿತ್ಯದ ವ್ಯವಹಾರಗಳಲ್ಲಿ ನಾವು ಕನ್ನಡವನ್ನು ಕಡ್ಡಾಯವಾಗಿ ಬಳಸುವ ಮೂಲಕ ಇನ್ನಷ್ಟು ಸಶಕ್ತಗೊಳಿಸಬೇಕಾಗಿದೆ.
(ಹಲವು ವಿಷಯಗಳು ಸಂಗ್ರಹ ಲೇಖನದಿಂದ
ಆಯ್ಕೆ ಮಾಡಲಾಗಿದೆ.)
-
ಕೆ.ಟಿ.ಆರ್.
No comments:
Post a Comment